ಮಹಾತ್ಮರ ಗೊಂದಲ ಕಂಡು - TopicsExpress



          

ಮಹಾತ್ಮರ ಗೊಂದಲ ಕಂಡು ಮುದಗೊಳ್ಳುವ ಸಾಮಾನ್ಯರು: ‘ಗಾಂಧಿ ವಿರುದ್ಧ ಗಾಂಧಿ’ ಎಂಬ ಮರಾಠಿ ನಾಟಕ ಕನ್ನಡಕ್ಕೆ ಅನುವಾದಗೊಂಡು ಪ್ರದರ್ಶನಗೊಂಡಾಗ ಅದನ್ನು ನೋಡಿದ ಎಡಪಂಥೀಯ ಲೇಖಕನೊಬ್ಬ ‘ಗಾಂಧಿ ಎಂಥ ದುಷ್ಟ ಎನ್ನುವುದು ಇದರಿಂದ ಗೊತ್ತಾಯಿತು’ ಎಂದು ಯುದ್ಧ ಗೆದ್ದ ಖುಷಿಯಲ್ಲಿ ಹೇಳಿದ. ಅವನ ಖುಷಿ ಕಂಡು ಅಚ್ಚರಿಯಾಯಿತು. ಮಹಾತ್ಮನೊಬ್ಬನ ವೈರುಧ್ಯಗಳನ್ನೋ, ಗೊಂದಲಗಳನ್ನೋ ಕಂಡಾಗ ಪ್ರಾಯಶಃ ನಮಗೆ ಹುಟ್ಟಬಹುದಾದ ಭಾವನೆಯೆಂದರೆ ಅಚ್ಚರಿ ಅಥವಾ ದಿಗ್ಭ್ರಮೆಯೇ ಹೊರತು ಸಂಭ್ರಮವಲ್ಲ. ಅಥವಾ ಮಹಾತ್ಮನೊಬ್ಬನಿಗೆ ಕೂಡ ನಮ್ಮಂಥವೇ ಗೊಂದಲಗಳಿರುತ್ತವೆ ಎಂಬುದನ್ನು ನಾವು ಅರಿತಿದ್ದರೆ ಆ ದಿಗ್ಭ್ರಮೆಯ ಪ್ರಮಾಣ ಕೂಡ ಕಡಿಮೆಯಾಗಬಲ್ಲದು. ಅಂಬೇಡ್ಕರ್ ವಾದದ ಪರ ಕೊಂಚ ಒಲವುಳ್ಳ ಆತನನ್ನು ‘ಒಂದುವೇಳೆ ಅಂಬೇಡ್ಕರ್ ಮತ್ತು ಅವರ ಪತ್ನಿಯ ನಡುವಣ ಘರ್ಷಣೆಯ ಬಗ್ಗೆ ನಾಟಕ ಬರೆದರೂ ಇಂಥ ನೂರು ವೈರುಧ್ಯಗಳನ್ನು ತೋರಿಸಬಹುದು, ಅಥವಾ ಚರಿತ್ರೆಯಲ್ಲಿ ಎರಡೂವರೆ ಸಾವಿರ ವರ್ಷ ಹಿಂದೆ ಹೋಗಿ, ಮಧ್ಯರಾತ್ರಿ ಏಕಾಏಕಿ ಹೆಂಡತಿ ಮಕ್ಕಳನ್ನು ಬಿಟ್ಟುಹೋದ ಸಿದ್ಧಾರ್ಥ ಒಬ್ಬ ಪಲಾಯನವಾದಿ ಎಂದು ಕೂಡ ಚಿತ್ರಿಸಬಹುದಲ್ಲವೇ…’ ಎಂದು ಕೆಣಕಿದರೆ ಅವನಲ್ಲಿ ಉತ್ತರವಿರಲಿಲ್ಲ. -ಡಾ. ನಟರಾಜ್ ಹುಳಿಯಾರ್ (ಗಾಳಿಬೆಳಕು, ಲಂಕೇಶ್ ಪತ್ರಿಕೆ, ಜುಲೈ 15, 1998) Courtesy : VR Carpenter
Posted on: Thu, 03 Oct 2013 06:11:06 +0000

Trending Topics



Recently Viewed Topics




© 2015